
*ನೇಸರ ನೋಡು’ ಸುಗಮ ಸಂಗೀತ ಕಾರ್ಯಕ್ರಮ ಪ್ರೇಕ್ಷಕರ ಮನಸೂರೆಗೊಂಡಿತು **ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (BAI) ಮೈಸೂರು ಘಟಕದ ಪರಿಸರ ಮಾಸಾಚರಣೆ ಸಮಿತಿ, ‘ಸ್ಪೂರ್ತಿ’ ಬಿ.ಎ.ಬಿ. ಮಹಿಳಾ ಘಟಕ ಹಾಗೂ ಕರ್ನಾಟಕ ಸುಗಮ ಸಂಗೀತ ಪರಿಷತ್ ಮೈಸೂರು ಜಂಟಿ ಸಹಯೋಗದಲ್ಲಿ ಜೂನ್ 17, 2026 ರಂದು ಹಮ್ಮಿಕೊಂಡಿದ್ದ ವಿಶ್ವ ಪರಿಸರ ಮಾಸದ ವಿಶೇಷ ಕಾರ್ಯಕ್ರಮ “ನೇಸರ ನೋಡು” (ಕವಿ ಚಿತ್ರಗೀತೆಗಳು) ಅಭೂತಪೂರ್ವ ಯಶಸ್ಸನ್ನು ಕಂಡಿದೆ. ಮೈಸೂರಿನ ಅಕ್ಕಮಹಾದೇವಿ ರಸ್ತೆಯಲ್ಲಿರುವ ಬಿ.ಎ.ಐ ನ ಎಂ.ಬಿ.ಸಿ.ಟಿ. ಆಡಿಟೋರಿಯಂನಲ್ಲಿ ಆಯೋಜಿಸಲಾಗಿದ್ದ ಈ ಸುಂದರ ಸಂಜೆ, ಪರಿಸರ ಜಾಗೃತಿಯ ಸಂದೇಶದೊಂದಿಗೆ ನೆರೆದಿದ್ದ 300 ಕ್ಕೂ ಹೆಚ್ಚು ಸಂಗೀತ ಆಸಕ್ತರಿಗೆ ಅತ್ಯದ್ಭುತ ಸಂಗೀತ ರಸದೌತಣವನ್ನು ಉಣಬಡಿಸಿತು. ಇಡೀ ಸಭಾಂಗಣವು ಪ್ರೇಕ್ಷಕರಿಂದ ತುಂಬಿ ತುಳುಕುತ್ತಿದ್ದು, ಕೊನೆಯವರೆಗೂ ಎಲ್ಲರೂ ಮಂತ್ರಮುಗ್ಧರಾಗಿ ಕುಳಿತು ಸಂಗೀತ ಸುಧೆಯಲ್ಲಿ ಮಿಂದೆದ್ದದ್ದು ಈ ಕಾರ್ಯಕ್ರಮದ ವಿಶೇಷವಾಗಿತ್ತು.ಈ ಕಾರ್ಯಕ್ರಮದ ಯಶಸ್ಸಿನ ಪ್ರಮುಖ ರೂವಾರಿಯಾಗಿ, ಇಡೀ ಸಂಜೆಯನ್ನು ಅತ್ಯಂತ ವ್ಯವಸ್ಥಿತವಾಗಿ ಮುನ್ನಡೆಸಿದವರು ಕರ್ನಾಟಕ ಸುಗಮ ಸಂಗೀತ ಪರಿಷತ್ ಮೈಸೂರು ಘಟಕದ ಅಧ್ಯಕ್ಷರು ಹಾಗೂ BAI ನ ಮಾಜಿ ಅಧ್ಯಕ್ಷರು ಆಗಿರುವ ನಾಗರಾಜ್ ವಿ. ಭೈರಿ ರವರು. ಇವರ ಸಂಗೀತ ಸೇವೆಗಾಗಿ ಇವರನ್ನು ಗೌರವ ಪೂರ್ವಕವಾಗಿ ಬಿ.ಎ.ಐ ವತಿಯಿಂದ ವೇದಿಕೆಯಲ್ಲಿ ಸನ್ಮಾನ ಮಾಡಲಾಯಿತು. ಕಾರ್ಯಕ್ರಮದ ಯಶಸ್ಸಿಗೆ ಬಿ.ಎ.ಐ ಮೈಸೂರು ಘಟಕದ ಚೇರ್ಮನ್ ಪ್ರಭಾಕರ್ ರಾವ್ ಕೆ.ಆರ್, ಗೌರವ ಕಾರ್ಯದರ್ಶಿ ಪ್ರವೀಣ್ ಪಾಲ್ ಎಂ.ಡಿ, WEM ಚೇರ್ಮನ್ ಸಿ.ಡಿ. ಕೃಷ್ಣ, ಕಾರ್ಯದರ್ಶಿ ಎಸ್. ವಾಸುದೇವನ್, ‘ಸ್ಪೂರ್ತಿ’ ಸಂಸ್ಥೆಯ ಪ್ರೆಸಿಡೆಂಟ್ ಶ್ರೀಮತಿ ಶಾಂತಿ ಭಾರದ್ವಾಜ್, ಕಾರ್ಯದರ್ಶಿ ಶ್ರೀಮತಿ ವೀಣಾ ಅಶೋಕ್ ಮತ್ತು ಎಲ್ಲಾ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡಿದ್ದು ಕಾರಣವಾಯಿತು .ಕಾರ್ಯಕ್ರಮಕ್ಕೆ ಮೆರುಗು ನೀಡಿದ ಪ್ರಸಿದ್ಧ ಗಾಯಕರಾದ ನಿತಿನ್ ರಾಜಾರಾಮ್ ಶಾಸ್ತ್ರಿ, ರಶ್ಮಿ ಚಿಕ್ಕಮಗಳೂರು, ಲಕ್ಷ್ಮಿ ದಿನೇಶ್, ನರಸಿಂಹಮೂರ್ತಿ ಹಾಗೂ ತ್ಯಾಗರಾಜ್ ರವರು ತಮ್ಮ ಸುಮಧುರ ಧ್ವನಿಯ ಮೂಲಕ ಪರಿಸರ ಮತ್ತು ಸಾಹಿತ್ಯದ ಸೊಗಡನ್ನು ಅದ್ಭುತವಾಗಿ ಪ್ರಸ್ತುತಪಡಿಸಿದರು. ಇವರಿಗೆ ವಾದ್ಯವೃಂದದಲ್ಲಿ ಕೀ ಬೋರ್ಡ್ನಲ್ಲಿ ಪುರುಷೋತ್ತಮ್, ರಿದಂ ಪ್ಯಾಡ್ನಲ್ಲಿ ಗುರುದತ್, ತಬಲಾದಲ್ಲಿ ರೋಷನ್ ಸೂರ್ಯ ಹಾಗೂ ಕೊಳಲಿನಲ್ಲಿ ಪುನೀತ್ ರವರು ಈ ಕಾರ್ಯಕ್ರಮವನ್ನು ಸವಾಲಾಗಿ ಸ್ವೀಕರಿಸಿ ಅತ್ಯಂತ ಅದ್ಭುತವಾಗಿ ಸಾಥ್ ನೀಡಿದರು. ಎಂದಿನಂತೆ ತಮ್ಮ ಚುರುಕಿನ ಹಾಗೂ ಲೈವ್ಲಿ ನಿರೂಪಣೆಯ ಮೂಲಕ ಇಡೀ ಸಭಾಂಗಣವನ್ನು ಉತ್ಸಾಹದಿಂದ ಇರಿಸಿದ ಎಡೆಯೂರ್ ಸಮೀಉಲ್ಲಾ ರವರ ಕಾರ್ಯ ಶ್ಲಾಘನೀಯ. ಬಂದಿದ್ದ ಎಲ್ಲಾ ಬಿಲ್ಡರ್ ಸ್ನೇಹಿತರು, ಗೃಹಿಣಿಯರು ಹಾಗೂ ಗಣ್ಯರಿಂದ ಪ್ರಶಂಸೆಯ ಮಹಾಪೂರವೇ ಹರಿದುಬಂದಿದ್ದು, ಇದೊಂದು ‘ಸೂಪರ್ ಡ್ಯೂಪರ್ ಹಿಟ್’ ಮತ್ತು ಸಾರ್ಥಕ ಕಾರ್ಯಕ್ರಮವಾಗಿ ದಾಖಲಾಗಿದೆ.

RELATED ARTICLES
